ಟಿ ಪಬ್ಲಿಕ್ ನ್ಯೂಸ್
ಏಪ್ರಿಲ್ : 17
ಗಂಗಾವತಿ: ಬೇಸಿಗೆಯ ಉರಿ ಬಿಸಿಲಿನ ನಡುವೆಯೂ ಮಾನವೀಯತೆ ಮೆರೆಯುವಂತೆ, ನಗರದ ಸರಕಾರಿ ಉಪ ವಿಭಾಗ ಆಸ್ಪತ್ರೆ ಮುಂಭಾಗದಲ್ಲಿ ರೋಟರಿ ಉಮೆನ್ಸ್ ಕ್ಲಬ್ ಆಫ್ ರೈಸ್ ಬೌಲ್ ಗಂಗಾವತಿ ಹಾಗೂ ಎಸ್ಎಸ್ಪಿ ಲೈಫ್ ಮಿಷನ್ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ಹಾಗೂ ಸೇವಾ ಮನೋಭಾವದಿಂದ ಹಮ್ಮಿಕೊಳ್ಳಲಾಯಿತು.
ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಈ ಸಮಯದಲ್ಲಿ ಆಸ್ಪತ್ರೆಗೆ ಆಗಮಿಸುವ ರೋಗಿಗಳು,ಹಾಗೂ ಸಾರ್ವಜನಿಕರಿಗೆ ತಂಪು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ವಿಶೇಷ ಗಮನಸೆಳೆಯಿತು. ಮಜ್ಜಿಗೆ ವಿತರಣೆ ಕೇಂದ್ರದ ಮುಂದೆ ಜನರು ಸಾಲಿನಲ್ಲಿ ನಿಂತು ತಂಪಾದ ಮಜ್ಜಿಗೆಯನ್ನು ಸ್ವೀಕರಿಸಿ ತೃಪ್ತಿಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಕ್ಲಬ್ ಅಧ್ಯಕ್ಷೆ ಗೀತಾ ಚೌದ್ರಿ, “ಬೇಸಿಗೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸ್ವಲ್ಪವಾದರೂ ಆರಾಮ ನೀಡಬೇಕು ಎಂಬುದು ನಮ್ಮ ಉದ್ದೇಶ. ಸೇವೆಯೇ ನಮ್ಮ ಧರ್ಮ ಎಂಬ ನಂಬಿಕೆಯಿಂದ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದೇವೆ,ಈ ಸೇವಾ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಾಜದ ಹಿತಕ್ಕಾಗಿ ಇಂತಹ ಮಾನವೀಯ ಕಾರ್ಯಗಳು ಮುಂದುವರಿಯಬೇಕು ಎಂಬ ಆಶಯ ವ್ಯಕ್ತವಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಸ್.ಪಿ. ಲೈಫ್ ಮಿಷನ್ ಮ್ಯಾನೇಜ್ಮೆಂಟ್ ನಿರ್ದೇಶಕರಾದ ಸೋಫಿಯಾರಾಣಿ, ನಮ್ಮ ರೋಟರಿ ರೈಸ್ ಕ್ಲಬ್ ವತಿಯಿಂದ ಪ್ರತಿವರ್ಷವೂ ಸಮಾಜಕ್ಕೆ ಉಪಯುಕ್ತವಾಗುವ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಕೈಯಲ್ಲಿ ಸಾಧ್ಯವಾದ ಮಟ್ಟಿಗೆ ಸೇವೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದು, ರಕ್ತದಾನ ಶಿಬಿರಗಳು ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದರು. ಮುಂದಿನ ದಿನಗಳಲ್ಲಿ ದೇವರ ಕೃಪೆಯಿಂದ ಇನ್ನಷ್ಟು ಶಕ್ತಿ ದೊರಕಿದರೆ, ಇನ್ನೂ ದೊಡ್ಡ ಮಟ್ಟದಲ್ಲಿ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ನೆರವಾಗುವ ಉದ್ದೇಶ ಹೊಂದಿದ್ದೇವೆ ಎಂದು ಭರವಸೆ ನೀಡಿದರು.

ರೋಟರಿ ಕ್ಲಬ್ ರೈಸ್ ಸದಸ್ಯೆ ಲಲಿತಾ ನಾಗರಾಜ ಅವರು ಮಾತನಾಡಿ, “ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಜನರು ಹೊರಗೆ ಸಂಚರಿಸಲು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನಿಷ್ಠ ಒಂದು ದಿನವಾದರೂ ಜನರಿಗೆ ತಂಪಿನ ಅನುಭವ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಇತರ ಸಂಘ ಸಂಸ್ಥೆಗಳೂ ಕೂಡ ಇಂತಹ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.

ಶಾಹಿನ್ ಕೌಸರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, “ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಬಹಳ ಉಪಕಾರಿಯಾಗಿದೆ. ಬೇಸಿಗೆಯಲ್ಲಿ ದೇಹದ ನೀರಿನ ಅಂಶ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಆದ್ದರಿಂದ ಪ್ರತಿಯೊಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಆರೋಗ್ಯದ ಮಹತ್ವವನ್ನು ಎತ್ತಿಹಿಡಿದರು.

ವಿಜಯಕುಮಾರ್ ಗದ್ದಿ ಅವರು ಮಾತನಾಡಿ, “ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಅತ್ಯಂತ ಅಗತ್ಯ. ಒಂದೇ ದಿನಕ್ಕೆ ಸೀಮಿತವಾಗದೇ ನಿರಂತರವಾಗಿ ನಡೆಯುವಂತೆ ಎಲ್ಲರೂ ಕೈಜೋಡಿಸಬೇಕು” ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರೋಟರಿ ರೈಸ್ ಕ್ಲಬ್ ಕಾರ್ಯದರ್ಶಿ ಬಿ.ಶ್ರೀದೇವಿ, ರೋಟರಿ ಕ್ಲಬ್ ರೈಸ್ ಸದಸ್ಯರಾದ ಲಲಿತಾ ನಾಗರಾಜ,ಶಾಹಿನ್ ಕೌಸರ್, ವಿಜಯಕುಮಾರ್ ಗದ್ದಿ.
ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಎ.ಎಸ್.ಐ ರೇವಪ್ಪ, ಕಲಾವತಿ, ಸಂಚಾರಿ ಪೊಲೀಸ್ ಸಿಬ್ಬಂದಿ ಪರಶುರಾಮ, ಮಲ್ಲಪ್ಪ.ಸೇರಿದಂತೆ ಹಲವರು ಉಪಸ್ಥಿತರಿದ್ದರು
ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
More Stories
ಕಿಷ್ಕಿಂದ ಪಿಯು ಕಾಲೇಜಿಗೆ ಶೇ.100 ಫಲಿತಾಂಶದ ಸಂಭ್ರಮ – ಡಾ. ಚಂದ್ರಪ್ಪ ಮೆಚ್ಚುಗೆ
ಶ್ರೀ ವಿದ್ಯಾನಿಕೇತನ ಪಿಯುಸಿ ಫಲಿತಾಂಶದಲ್ಲಿ ಭರ್ಜರಿ ಸಾಧನೆ – ಉತ್ತರ ಕರ್ನಾಟಕಕ್ಕೆ ಹೊಸ ಗರಿಮೆ
ಬೇತೆಲ್ ಪದವಿ ಪೂರ್ವ ಕಾಲೇಜ್ನ ಅತ್ಯುತ್ತಮ ಫಲಿತಾಂಶ – ವಿದ್ಯಾರ್ಥಿಗಳ ಅದ್ಭುತ ಸಾಧನೆ