July 15, 2026

ರಸ್ತೆ ಒತ್ತುವರಿ ಆರೋಪ ನಿರಾಧಾರ; ಕಾನೂನುಬದ್ಧವಾಗಿಯೇ ರೆಸಾರ್ಟ್ ನಿರ್ಮಿಸಲಾಗಿದೆ: ರಮೇಶ್ ನಾಯಕ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 13/07/2026

ಗಂಗಾವತಿ: ಹನುಮನಹಳ್ಳಿ ಗ್ರಾಮದ ಸರ್ವೆ ನಂ. 75 ಹಾಗೂ 84ರ ಜಮೀನಿಗೆ ಸಂಬಂಧಿಸಿದ ರಸ್ತೆ ಒತ್ತುವರಿ ಆರೋಪಗಳು ಸಂಪೂರ್ಣ ಸುಳ್ಳಾಗಿದ್ದು, ಕಾನೂನಿನ ಪ್ರಕಾರ ಎಲ್ಲ ಅಗತ್ಯ ಅನುಮತಿ ಪಡೆದುಕೊಂಡು ರೆಸಾರ್ಟ್ ನಿರ್ಮಿಸಲಾಗಿದೆ ಎಂದು ರೆಸಾರ್ಟ್ ವ್ಯವಸ್ಥಾಪಕ ರಮೇಶ್ ನಾಯಕ ಸ್ಪಷ್ಟಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಜಮೀನು ಖರೀದಿ ಮಾಡುವ ಮುನ್ನವೇ ಸರ್ವೆ ನಂ. 61ರಲ್ಲಿ ರಸ್ತೆ ಅಸ್ತಿತ್ವದಲ್ಲಿತ್ತು. ಜಮೀನು ಮಾರಾಟದ ವೇಳೆ ಅಣ್ಣಪ್ಪ ಅವರ ತಂದೆಯವರೇ ರಸ್ತೆ ಇರುವುದಾಗಿ ತಿಳಿಸಿ ಜಮೀನು ನೀಡಿದ್ದಾರೆ. ಅಲ್ಲದೆ, ಸರ್ವೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ನಕ್ಷೆಗಳಲ್ಲೂ ರಸ್ತೆ ನಮೂದಾಗಿದ್ದು, ಅದೇ ಆಧಾರದ ಮೇಲೆ ಗ್ರಾಮ ಪಂಚಾಯಿತಿಯಿಂದ ಸಿಸಿ ರಸ್ತೆ ನಿರ್ಮಿಸಲಾಗಿದೆ” ಎಂದು ಹೇಳಿದರು.

ಈ ದಾಖಲೆಗಳ ಆಧಾರದ ಮೇಲೆ ಭೂ ಪರಿವರ್ತನೆ (ಎನ್‌ಎ) ಮಾಡಿಕೊಂಡು, ಕಾನೂನುಬದ್ಧವಾಗಿ ರೆಸಾರ್ಟ್‌ಗೆ ಪರವಾನಗಿ ಪಡೆದು ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ಇಷ್ಟು ವರ್ಷ ಯಾವುದೇ ಆಕ್ಷೇಪ ವ್ಯಕ್ತಪಡಿಸದವರು ಇದೀಗ ಏಕಾಏಕಿ ರಸ್ತೆ ಒತ್ತುವರಿ ಆರೋಪ ಮಾಡುತ್ತಿರುವುದು ಉದ್ದೇಶಪೂರ್ವಕ ಎಂದು ಆರೋಪಿಸಿದರು.

ರಸ್ತೆ ಶಾಂತಮ್ಮ ಅವರ ಜಮೀನಿನಲ್ಲಿದೆ ಎಂಬ ವಾದ ಸತ್ಯವಾಗಿದ್ದರೆ, ಸರ್ವೆ ನಡೆಸಿಸಿ ನ್ಯಾಯಾಲಯದ ಮೂಲಕ ಕಾನೂನುಬದ್ಧವಾಗಿ ನ್ಯಾಯ ಪಡೆಯಬೇಕು. ಅದರ ಬದಲಾಗಿ ರಸ್ತೆ ಬಂದ್ ಮಾಡಿ, ರೆಸಾರ್ಟ್‌ಗೆ ಬರುವ ಪ್ರವಾಸಿಗರಿಗೆ ತೊಂದರೆ ಉಂಟು ಮಾಡಲಾಗುತ್ತಿದೆ. ಈ ರೀತಿಯ ಕ್ರಮಗಳು ಮುಂದುವರಿದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೃಷ್ಣ ನಾಯಕ, ಶ್ರೀನಿವಾಸ ನಾಯಕ, ಅಭಿಜಿತ್ ಹಾಗೂ ಹನುಮಂತ ಬೇವೂರ್ ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!