July 15, 2026

“ಪುಣ್ಯಸ್ಮರಣೆಗಷ್ಟೇ ಸೀಮಿತವಾಗದೆ ಮಾನವಸೇವೆಗೆ ಮೆರಗು: ಅಂಧ ಮಕ್ಕಳು–ವೃದ್ಧರಿಗೆ ಆಸರೆಯಾದ ಬೂದಿರೆಡ್ಡಪ್ಪ ನಾಯಕ ಸ್ಮರಣೆ”

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 12/07/2026

ಅನ್ನಸಂತರ್ಪಣೆ, ಶಿಕ್ಷಣ ಸಹಾಯ, ಮಾನವೀಯ ಸೇವೆಯ ಮೂಲಕ ದಿವಂಗತರ ಸಮಾಜಸೇವೆ ಆದರ್ಶಗಳಿಗೆ ಗೌರವ ನಮನ

ಗಂಗಾವತಿ: ಪುಣ್ಯಸ್ಮರಣೆ ಎಂದರೆ ಕೇವಲ ಪುಷ್ಪನಮನವಲ್ಲ, ಸಮಾಜಸೇವೆಯ ಮೂಲಕ ವ್ಯಕ್ತಿಯ ಆದರ್ಶಗಳನ್ನು ಜೀವಂತವಾಗಿಡಬಹುದು ಎಂಬುದಕ್ಕೆ ಕಾರಟಗಿಯ ಶ್ರೀಮತಿ ಅಯ್ಯಮ್ಮ ಬೂದಿರೆಡ್ಡಪ್ಪ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ಮಾದರಿಯಾಗಿದೆ. ಉತ್ತರ ಕರ್ನಾಟಕದ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಜಿ. ರಾಮುಲು ಅವರ ಗರಡಿಯಲ್ಲಿ ಬೆಳೆದ ಎಪಿಎಂಸಿ ಮಾಜಿ ನಿರ್ದೇಶಕ ಹಾಗೂ ಸಮಾಜಸೇವಕ ದಿವಂಗತ ಬೂದಿರೆಡ್ಡಪ್ಪ ನಾಯಕರ ಒಂಬತ್ತನೇ ವರ್ಷದ ಪುಣ್ಯಸ್ಮರಣೆಯನ್ನು ಟ್ರಸ್ಟ್ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿತು.

ಈ ಅಂಗವಾಗಿ ನಗರದ ಲಯನ್ಸ್ ಮನೋವಿಕಲಚೇತನ ಮಕ್ಕಳ ವಸತಿ ನಿಲಯ ಹಾಗೂ ಕಂಪ್ಲಿ ರಸ್ತೆಯ ನವಜೀವನ ವೃದ್ಧಾಶ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಂಧ ಮಕ್ಕಳು ಮತ್ತು ವೃದ್ಧರಿಗೆ ಅನ್ನಸಂತರ್ಪಣೆ, ಹಣ್ಣುಹಂಪಲು, ಉಡುಪು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಿ ಮಾನವೀಯ ಸೇವೆ ಸಲ್ಲಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಬೂದಿ ನಾಗರಾಜ್ ನಾಯಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಟ್ರಸ್ಟ್ ಪದಾಧಿಕಾರಿಗಳು ಭಾಗವಹಿಸಿ ದಿವಂಗತ ಬೂದಿರೆಡ್ಡಪ್ಪ ನಾಯಕ ಅವರ ಸಮಾಜಸೇವೆಯ ಆದರ್ಶಗಳನ್ನು ಸ್ಮರಿಸಿದರು.

ಈ ವೇಳೆ ಮಾತನಾಡಿದ ಬೂದಿ ನಾಗರಾಜ್ ನಾಯಕ, ಟ್ರಸ್ಟ್ ಹಲವು ವರ್ಷಗಳಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಿರಂತರ ನೆರವು ನೀಡುತ್ತಿದ್ದು, ಟ್ರಸ್ಟ್‌ನ ಸಹಾಯದಿಂದ ಕಾನೂನು ಪದವಿ ಪೂರ್ಣಗೊಳಿಸಿದ ಅನೇಕ ವಿದ್ಯಾರ್ಥಿಗಳು ಇಂದು ಗಂಗಾವತಿ ವಕೀಲರ ಸಂಘದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣ ವೆಚ್ಚವನ್ನೂ ಟ್ರಸ್ಟ್ ಭರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಮಾಜಸೇವೆಯ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ದಿವಂಗತ ಬೂದಿರೆಡ್ಡಪ್ಪ ನಾಯಕ ಅವರ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು, ಟ್ರಸ್ಟ್‌ನ ಮಾನವೀಯ ಸೇವೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಕಾರಟಗಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬೂದಿ ದೊಡ್ಡಬಸಪ್ಪ ನಾಯಕ, ವಕೀಲ ಹೊನ್ನಪ್ಪ ನಾಯಕ, ರಾಜಶೇಖರ, ಹನುಮೇಶ ಜೀರಾಳ, ಬಸವರಾಜ ತಳವಾರ, ಅವಿನಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News

About The Author

error: Content is protected !!