April 14, 2026

ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಪಿ.ಐ. ಪ್ರಕಾಶ್ ಮಾಳೆಯವರಿಗೆ ಪತ್ರಕರ್ತರ ಸಂಘದಿಂದ ಆತ್ಮೀಯ ಸನ್ಮಾನ

ಟಿ ಪಬ್ಲಿಕ್ ನ್ಯೂಸ್

ಗಂಗಾವತಿ: ಕರ್ತವ್ಯನಿಷ್ಠೆ, ಶಿಸ್ತು ಮತ್ತು ಜನಸೇವೆಗಾಗಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಗಂಗಾವತಿ ನಗರ ಪೊಲೀಸ್ ಠಾಣೆಯ ಪಿ.ಐ. ಪ್ರಕಾಶ್ ಮಾಳೆ ಅವರಿಗೆ ಗಂಗಾವತಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಮುಕ್ಕುಂದಿ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಪ್ಪ ನಾಯಕ ಅವರ ನೇತೃತ್ವದಲ್ಲಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಪತ್ರಕರ್ತರು ಒಗ್ಗೂಡಿ ಗೌರವ ಸಮರ್ಪಿಸಿದರು.

ಸಮಾರಂಭದಲ್ಲಿ ಮಾತನಾಡಿದ ತಾಲೂಕು ಉಪಾಧ್ಯಕ್ಷರಾದ ಜೋಗದ ಕೃಷ್ಣಪ್ಪ ನಾಯಕ,ಪಿ.ಐ. ಪ್ರಕಾಶ್ ಮಾಳೆ ಅವರು ಪೊಲೀಸ್ ಇಲಾಖೆಯಲ್ಲಿ ತೋರಿದ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮಾಜಮುಖಿ ಸೇವೆಯನ್ನು ಶ್ಲಾಘಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರ ತ್ಯಾಗಮಯ ಸೇವೆ ಮಾದರಿಯಾಗಿದ್ದು, ಯುವ ಪೊಲೀಸ್ ಅಧಿಕಾರಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿದ ಪಿ.ಐ. ಪ್ರಕಾಶ್ ಮಾಳೆ ಅವರು, ಈ ಗೌರವವು ತಮ್ಮೊಬ್ಬರ ಸಾಧನೆ ಮಾತ್ರವಲ್ಲದೆ, ಇಲಾಖೆಯ ಎಲ್ಲಾ ಸಹೋದ್ಯೋಗಿಗಳ ಸಹಕಾರದ ಫಲವಾಗಿದೆ ಎಂದು ವಿನಮ್ರವಾಗಿ ಹೇಳಿದರು. ಜನರ ವಿಶ್ವಾಸವನ್ನು ಕಾಪಾಡುವುದು ತಮ್ಮ ಪ್ರಾಥಮಿಕ ಕರ್ತವ್ಯವಾಗಿದ್ದು, ಮುಂದೆಯೂ ಇದೇ ನಿಷ್ಠೆಯಿಂದ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಗಂಗಾವತಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ದೇಸಾಯಿ, ಕಾರ್ಯದರ್ಶಿ ವೃಷಭೇಂದ್ರ ಸ್ವಾಮಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಹನುಮೇಶ್ ಬಟಾರಿ, ಶರಣಯ್ಯ ಸ್ವಾಮಿ, ತಾಲೂಕು ಉಪಾಧ್ಯಕ್ಷರಾದ ಜೋಗದ ಕೃಷ್ಣಪ್ಪ ನಾಯಕ, ಗೌರವಾಧ್ಯಕ್ಷರಾದ ನಾಗರಾಜ್ ಇಂಗಳಗಿ ಸೇರಿದಂತೆ ಡಿ. ದೇವರಾಜ್, ಟಿ. ಮಹೇಶ್, ದಿವಾಕರ್, ಎನ್. ವಿಜಯ, ಅಕ್ಷಯ್ ಕುಮಾರ್, ವಸಂತ್ ರಾವ್ ಪಟೇಲ್, ಲಕ್ಷ್ಮಣ್, ವೆಂಕಟೇಶಮಾಂತ, ಮಂಜುನಾಥ್ ಗುಡ್ಲಾನೂರು, ಮಲ್ಲೇಶ್ ರಾವ್, ಶರಣಪ್ಪ ಉಪ್ಪಾರ್, ಗಾದಿಲಿಂಗಪ್ಪ ನಾಯಕ, ರಗಡಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಆತ್ಮೀಯ ವಾತಾವರಣದಲ್ಲಿ ನಡೆದಿದ್ದು, ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳ ನಡುವಿನ ಪರಸ್ಪರ ಸಹಕಾರಕ್ಕೆ ಇದು ಮತ್ತಷ್ಟು ಬಲ ತುಂಬಿದಂತಾಯಿತು.

ನೈಜ ಸುದ್ದಿಗಾಗಿ  ಟಿ ಪಬ್ಲಿಕ್ ನ್ಯೂಸ್

About The Author

error: Content is protected !!