May 30, 2026

ಗಂಗಾವತಿಯಲ್ಲಿ ಧರ್ಮಜಾಗೃತಿ ಘೋಷಣೆ: “ಭತ್ತದ ನಾಡು ಜೊತೆಗೆ ಧರ್ಮದ ನೆಲೆಬೀಡು” ಎಂದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಶ್ರೀಗಳು

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ :22/05/2026

ಗಂಗಾವತಿ: ತುಂಗಭದ್ರಾ ನದಿಯ ಕೃಪೆಯಿಂದ ‘ಭತ್ತದ ನಾಡು’ ಎಂದು ಖ್ಯಾತಿ ಪಡೆದಿರುವ ಗಂಗಾವತಿ, ಕಿಷ್ಕಿಂಧಾ ಕ್ಷೇತ್ರದ ಪಾವಿತ್ರ್ಯದಿಂದ ಧರ್ಮದ ನೆಲೆಬೀಡಾಗಿ ಬೆಳಗುತ್ತಿದೆ ಎಂದು ಶುಕ್ಲ ಯಜುರ್ವೇದಿಗಳ ಶ್ರೀಮದ್ ಕಣ್ವ ಮಠಾಧೀಶರಾದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಮಹಾಸ್ವಾಮಿಗಳು ಹೇಳಿದರು.

ಧರ್ಮಜಾಗೃತಿಗಾಗಿ ಕಮಲಾಪುರಕ್ಕೆ ಆಗಮಿಸಿದ್ದ ಪೂಜ್ಯರು, ಅಲ್ಲಿಂದ ಹುಣಸಿಹೊಳೆ ಕಣ್ವ ಪೀಠಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಶ್ರೀ ಯೋಗೇಶ್ವರ ಯಾಜ್ಞವಲ್ಕ್ಯ ಮಂದಿರಕ್ಕೆ ಭೇಟಿ ನೀಡಿ ಭಕ್ತರಿಗೆ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಧರ್ಮ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಉಳಿಸಿ ಬೆಳೆಸುವಲ್ಲಿ ಗಂಗಾವತಿಯ ಸೇವಾ ಸಮಿತಿಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಮಾಸದ ಅಂಗವಾಗಿ 33 ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳ ವಿದ್ವಾಂಸರನ್ನು ಆಹ್ವಾನಿಸಿ ‘ಜ್ಞಾನಸತ್ರ’ದಡಿ ಧಾರ್ಮಿಕ ಪ್ರವಚನಗಳನ್ನು ಆಯೋಜಿಸಿರುವುದು ಇಲ್ಲಿನ ಭಕ್ತರ ಧಾರ್ಮಿಕ ನಿಷ್ಠೆಗೆ ಸಾಕ್ಷಿಯಾಗಿದೆ ಎಂದರು.

ಮುಂದುವರೆದು ಮಾತನಾಡಿದ ಶ್ರೀಗಳು, ಇದೇ ತಿಂಗಳ 13ರಿಂದ 15ರವರೆಗೆ ಮೂರು ದಿನಗಳ ಕಾಲ ಗಂಗಾವತಿಯಲ್ಲಿ ವಾಸ್ತವ್ಯ ಹೂಡಿ ತೊಟ್ಟಿಲು ಪೂಜೆ, ಪುರುಷೋತ್ತಮ ಯಾಗ, ತಪ್ತಮುದ್ರಾ ಧಾರಣೆ ಹಾಗೂ ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ಮಂದಿರಕ್ಕೆ ಆಗಮಿಸಿದ ಪೂಜ್ಯರನ್ನು ಸೇವಾ ಸಮಿತಿಯ ಅಧ್ಯಕ್ಷ ಮುರಳಿಧರ್ ಗಂಗನಾಳ, ಪವನ್ ಜೋಶಿ, ರಾಘವೇಂದ್ರ ಮೇಗೂರು, ಸತೀಶ್ ಶೇಷಗಿರಿ ಕುಲಕರ್ಣಿ, ಗುರುರಾಜ ಚರ್ಚಿನಗುಡ್ಡ, ಆನಂದ್, ಮಣಿ, ಶ್ರೀನಿವಾಸ್ ಕುಲಕರ್ಣಿ, ರಾಮಕೃಷ್ಣ ಆಚಾರ್, ತಿರುಮಲರಾವ್ ಆಲಂಪಲ್ಲಿ, ರಾಘವೇಂದ್ರ ಲೆಕ್ಕಿಹಾಳ, ರಂಗನಾಥ್ ವಟಗಲ್, ಪ್ರಹ್ಲಾದ್ ಕೋಮಲಾಪುರ ಸೇರಿದಂತೆ ಅಪಾರ ಭಕ್ತರು ಪೂರ್ಣಕುಂಭದೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!