May 30, 2026

“ಅಲ್ಪಸಂಖ್ಯಾತರ ಮತ ಬೇಕು, ನಾಯಕತ್ವ ಬೇಡವೇ? — ಕಾಂಗ್ರೆಸ್ ವಿರುದ್ಧ ಬಂಡ್ರಾಳ್ ಮಹೆಬೂಬ್ ಕಿಡಿ”

🟥 ಟಿ ಪಬ್ಲಿಕ್ ನ್ಯೂಸ್ ಗಂಗಾವತಿ
ದಿನಾಂಕ : 21/05/2026

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್–2 ನೇಮಕಾತಿ ಅಧಿಕಾರವನ್ನು ಸಂಸದ ರಾಜಶೇಖರ್ ಹಿಟ್ನಾಳ ಅವರಿಗೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಕ್ರಮಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮತಗಳು ಬೇಕು, ಆದರೆ ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಗೌರವ ಹಾಗೂ ಅಧಿಕಾರ ನೀಡಲು ಮನಸ್ಸಿಲ್ಲವೇ?” ಎಂದು ಕಾಂಗ್ರೆಸ್ ಯುವ ಮುಖಂಡ ಬಂಡ್ರಾಳ್ ಮಹೆಬೂಬ್ ಕಿಡಿಕಾರಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಪ್ರಥಮ ಸ್ಥಾನ ಪಡೆದು ಪಕ್ಷ ಸಂಘಟನೆಗೆ ಅಪಾರ ಶ್ರಮವಹಿಸಿದ್ದ ಇಕ್ಬಾಲ್ ಅನ್ಸಾರಿ ಅವರನ್ನು ಈಗ ವ್ಯವಸ್ಥಿತವಾಗಿ ಪಕ್ಷದ ಅಂಚಿಗೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಬೂತ್ ಮಟ್ಟದ ಏಜೆಂಟರ ನೇಮಕಾತಿ ಅಧಿಕಾರವನ್ನು ಸಾಮಾನ್ಯವಾಗಿ ಆಯಾ ಕ್ಷೇತ್ರದ ಗೆದ್ದ ಅಥವಾ ಸೋತ ಅಭ್ಯರ್ಥಿಗಳಿಗೆ ನೀಡುವ ಪರಂಪರೆ ಇದ್ದರೂ, ಗಂಗಾವತಿ ಕ್ಷೇತ್ರದಲ್ಲಿ ಅನ್ಸಾರಿಗೆ ಅಧಿಕಾರ ನೀಡದೆ ರಾಜಶೇಖರ್ ಹಿಟ್ನಾಳ ಅವರಿಗೆ ಜವಾಬ್ದಾರಿ ಹಸ್ತಾಂತರಿಸಿರುವುದು ಅಲ್ಪಸಂಖ್ಯಾತ ನಾಯಕರ ಅವಮಾನಕ್ಕೆ ಸಮಾನವಾಗಿದೆ ಎಂದು ಮಹೆಬೂಬ್ ವಾಗ್ದಾಳಿ ನಡೆಸಿದರು.

“ಕೆಲವು ನಾಯಕರು ಉದ್ದೇಶಪೂರ್ವಕವಾಗಿ ಅನ್ಸಾರಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಅವರನ್ನು ರಾಜಕೀಯವಾಗಿ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನ್ಸಾರಿ ಬೆಂಬಲಿಗರ ಆಕ್ರೋಶ ಮತ್ತಷ್ಟು ಭುಗಿಲೆದ್ದಿದೆ,” ಎಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷದೊಳಗಿನ ಈ ಬೆಳವಣಿಗೆ ಗಂಗಾವತಿ ಕ್ಷೇತ್ರದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಅಲ್ಪಸಂಖ್ಯಾತ ಸಮುದಾಯದಲ್ಲಿ ಅಸಮಾಧಾನ ಸ್ಪಷ್ಟವಾಗಿ ಗೋಚರಿಸುತ್ತಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!