May 29, 2026

“ದಲಿತ ನಾಯಕರಿಗೆ ನ್ಯಾಯ ಕೊಡದಿದ್ದರೆ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸುತ್ತದೆ: ಕೆ.ಎಚ್.ಮುನಿಯಪ್ಪ ಡಿಸಿಎಂ ಆಗಲಿ ಎಂದು ನಾಗರಾಜ ದೊಡ್ಮನಿ ಆಗ್ರಹ”

🟥 ಟಿ ಪಬ್ಲಿಕ್ ನ್ಯೂಸ್ ಯಲಬುರ್ಗಾ
ದಿನಾಂಕ: 29/05/2026

ಯಲಬುರ್ಗಾ: ಹಲವು ದಶಕಗಳಿಂದ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿ, ಸಾಮಾಜಿಕ ನ್ಯಾಯದ ಪರವಾಗಿ ಗಟ್ಟಿ ಧ್ವನಿಯಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು ತಾಲೂಕು ಕಾಂಗ್ರೆಸ್ ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ದೊಡ್ಮನಿ ಹಿರೇವಡ್ರಕಲ್ ತೀವ್ರ ಒತ್ತಾಯಿಸಿದ್ದಾರೆ.

ಕೆ.ಎಚ್.ಮುನಿಯಪ್ಪ ಅವರು ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಕೇಂದ್ರ ಸಚಿವರಾಗಿಯೂ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಅಪಾರ ಆಡಳಿತ ಅನುಭವ ಹೊಂದಿದ್ದಾರೆ. ದಲಿತ ಸಮುದಾಯದ ಧ್ವನಿಯಾಗಿ ಕಾರ್ಯನಿರ್ವಹಿಸಿರುವ ಅವರು, ಹಲವು ದಶಕಗಳಿಂದ ಶೋಷಿತ ವರ್ಗಗಳ ಪರ ಹೋರಾಟ ನಡೆಸುತ್ತಾ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಜೀವನವನ್ನೇ ಪಕ್ಷ ಸಂಘಟನೆಗೆ ಸಮರ್ಪಿಸಿದ ಮುತ್ಸದ್ಧಿ ರಾಜಕಾರಣಿಯಾಗಿರುವ ಮುನಿಯಪ್ಪ ಅವರು, ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ಕರ್ನಾಟಕಕ್ಕೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದು ರಾಜ್ಯದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಕಾಂಗ್ರೆಸ್ ಪಕ್ಷವು ಈಗ ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ತೋರಿಸಬೇಕಾದ ಸಮಯ ಬಂದಿದೆ. ಹಿರಿಯ ದಲಿತ ನಾಯಕನಾದ ಕೆ.ಎಚ್.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ದಲಿತ, ಹಿಂದುಳಿದ ಹಾಗೂ ಶೋಷಿತ ವರ್ಗಗಳ ಗೌರವವನ್ನು ಉಳಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ನಿಲುವು ಕೇವಲ ರಾಜಕೀಯ ನಾಟಕ ಎಂಬ ಆರೋಪ ಮತ್ತಷ್ಟು ಬಲ ಪಡೆಯಲಿದೆ ಎಂದು ನಾಗರಾಜ ದೊಡ್ಮನಿ ಎಚ್ಚರಿಕೆ ನೀಡಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

About The Author

error: Content is protected !!